ಯಾರು ಬಿಟ್ಟರು ಕೈಯ ನೀ ಬಿಡದಿರು

ಯಾರು ಬಿಟ್ಟರು ಕೈಯ ನೀ ಬಿಡದಿರು

( ರಾಗ ನಾದನಾಮಕ್ರಿಯ ಆದಿತಾಳ) ಯಾರು ಬಿಟ್ಟರು ಕೈಯ ನೀ ಬಿಡದಿರು ಕಂಡ್ಯ, ನಾರಾಯಣ, ಸ್ವಾಮಿ ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ, ನಾರಾಯಣ || ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ, ನಾರಾಯಣ ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ, ನಾರಾಯಣ ಅದ ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ, ನಾರಾಯಣ ಬಹು ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ, ನಾರಾಯಣ || ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು, ನಾರಾಯಣ, ಸ್ವಾಮಿ ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ, ನಾರಾಯಣ ಹಂಬಲಿಸಿದರಂಜಬೇಡವೆಂಬುವರಿಲ್ಲ, ನಾರಾಯಣ ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ, ನಾರಾಯಣ || ಶಿಶು ಅವತಾರದಿ ಪಶುಗಳ ನೀ ಕಾಯ್ದೆ, ನಾರಾಯಣ, ಸ್ವಾಮಿ ದಶ ಅವತಾರದಿ ಚಕ್ರವ ತಾಳಿದೆ, ನಾರಾಯಣ ವಿಷದ ಕಾಳಿಂಗನ ಮಡುವ ಕಲಕಿ ಬಂದೆ, ನಾರಾಯಣ ವಸುಧೆಯೊಳಧಿಕ ಪುರಂದರವಿಠಲನೆ, ನಾರಾಯಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು