ಯಾರಿಗೆ ದೂರುವೆನೋ

ಯಾರಿಗೆ ದೂರುವೆನೋ

( ರಾಗ ಮುಖಾರಿ ಅಟ ತಾಳ) ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ ||ಪ || ಸಾರಿದ್ದ ಭಕ್ತಸಂಸಾರಿ ನಿನ್ನಯ ಪದ- ವಾರಿಜವನು ತೋರೊ ಕಾರುಣ್ಯನಿಧಿ ಬೇಗ ||ಅ || ಕಷ್ಟ ಜನ್ಮದಿ ಬಂದೆನೋ, ಧಾರುಣಿಯೊಳು ದುಷ್ಟರಿಂದಲಿ ನೊಂದೆನೋ ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯ ಬೇಡ || ಹಿಂದೆ ಮಾಡಿದ ಕರ್ಮವು, ಈ ಭವದೊಳು ಮುಂದಾಗಿ ತೋರುತಿದೆ ಇಂದಿಲ್ಲ ಗತಿಯದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ || ಹಗಲು ಕತ್ತಲೆ ಸುತ್ತಿಯೆ, ಗಂಗೆಡಿಸುತ್ತ ಹಗೆಯಾಗಿ ನಗಿಸುತಿದೆ ಉಗುರಿನ ಸಿಗಿಗೆ ಮುಳ್ಳುಗಳೀಗ ನೆಟ್ಟುವು ಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ || ಬಾಡಿದ ಅರಳಿಯನು, ಕಲ್ಲಿನ ಮೇಲೆ ಈಡಾಗಿ ನಾಟಿದರೆ ಬೇಡಿಕೊಂಡರೆ ತಳಿರು ಮೂಡಿ ಬರುವುದುಂಟೆ ರೂಢಿಗೊಡೆಯ ನೀನು ನೋಡದಿದ್ದ ಮೇಲೆ || ಹಲವು ಪರಿಯ ಕಷ್ಟವ, ನಿನ್ನಯ ಪಾದ- ಜಲಜದ ಕರುಣದಲಿ ಸುಲಿಗೆ ಕೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗು ಎನ್ನೊಳು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು