ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ

ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ

( ರಾಗ ಮುಖಾರಿ ಝಂಪೆ ತಾಳ) ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ- ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ|| ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು ಬಕಪಕ್ಷಿಯಂತೆ ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು ದಾನವಾಂತಕನ ಧ್ಯಾನಕೆ ಮೌನವುಂಟೆ ||೧|| ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ ಗುಪಿತದಿಂದಲಿ ಕುಳಿತು ಫಲವು ಏನೊ ಅಪರಿಮಿತ ಮಹಿಮ ನಾರಾಯಣಾ ಎಂದೆನಲು ಸಫಲವಲ್ಲದೆ ಬೇರೆ ಜಪವು ತಾನುಂಟೆ ||೨|| ಹಿಂದಜಾಮಿಳಗೆ ನಾಮಮಾತ್ರದಿ ಮುಕುತಿಯನು ಚಂದದಿಂ ಕರುಣಿಸಿದುದಿಲ್ಲವೇನೊ ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ ತಂದೆ ಪುರಂದರ ವಿಠ್ಠಲ ಎನು ಕಂಡ್ಯ ಮನವೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು