ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

   ಧ್ರುವ ತಾಳ
ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ
ಭಾವನೆಯನು ಕೇಳಿ ಭಕ್ತಜನರು
ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ
ದೇವನಲ್ಲೇವೆ ಇಂಥ ಗುಣಗಳುಂಟು
ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು
ಜೀವ ತಿಳಿದರೆ ಉದ್ಧಾರ ಉಂಟು
ಜೀವರೆಂಬುವರು ಕರ್ಮ ಬದ್ಧರು ಇನ್ನು
ದೇವನು ಕರ್ಮ ತ್ರಿಗುಣಾದಿ ರಹಿತ
ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ
ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ
ಪಾವನಾಂಗ ಪಾಪನಾಶ ನಿತ್ಯತೃಪ್ತಾ
ಜೀವದಿ ಜಡದಿ ಎಂದಿಗೆ ಅಗಲದೆ ಇಪ್ಪ
ಈ ವಿಧ ಶಕುತಿಯ ಈಶ ಗೋಪಾಲವಿಟ್ಠಲ
ದೇವರಿಗುಂಟೆಂದು ಅರಿವ ಜೀವನೆ ಬಲುಧನ್ಯ ||೧||

ಮಠ್ಯ ತಾಳ
ಬೊಮ್ಮಾಂಡವ ಸೃಜಿಸಿ ಬೊಮ್ಮನೊಳಗೆ ನಿಂತು
ಸುಮ್ಮನಸರನೆಲ್ಲ ನಿರ್ಮಿಸಿ ಪಾಲಿಸಿ
ಬೊಮ್ಮಾಂಡ ಅಳಿಸಿ ಬೊಮ್ಮನ ಕೊಲ್ಲುವ
ಬೊಮ್ಮಹತ್ತಿ ದೋಷವು ಎಮ್ಮಯ್ಯಗಿಲ್ಲ
ಹಮ್ಮಿನ ಹಂಸಡಿಬಿಕರ್ಯಲ್ಲಾರಾ
ನಿರ್ಮಳದಿ ಕೊಂದ ನಿರ್ಮತ್ಸರದಿಂದ
ಧರ್ಮದಿ ಈ ಪುಷ್ಪ ನಮ್ಮಯ್ಯಗೆಂದು
ಘಮ್ಮನೆ ಅರ್ಪಿಸು ಘನ ಭಕುತಿಯಲ್ಲಿ
ರಮ್ಮೆರಮಣನೆ ಗೋಪಾಲವಿಟ್ಠಲ ಪರ
ಬೊಮ್ಮ ಒಲಿವ ಹೀಗೆ ಧರ್ಮ ಅರಿದವರಿಗೆ ||೨||

ರೂಪಕ ತಾಳ
ಎರಡೆಂಟು ಸಾಸಿರ ಅರಸಿಯರ ಕೂಡ
ಪರಿ ಪರಿ ಕ್ರೀಡಿಯ ಮಾಡಿ ನೋಡಿ ಚಲ್ವ
ತರುಳ ತನದಿ ಹನ್ನೆರಡು ಸಾಸಿರಮಂದಿ
ತರುಳರ ಪಡೆದು ತಾ ಪರೀಕ್ಷಿತನಿಗೆ ಇನ್ನು
ಪರಿಣಾಮ ಮಾಡಿದವರ ಬ್ರಹ್ಮಚಾರಿ ಎಂದು
ಸರಿ ಹೋಗುವದೇ ಇಂಥ ಚರಿಯ ಮನುಜರಿಂದ
ಹರಿಗೆ ಇಂದ್ರಿಯನಿಗ್ರಹ ಸ್ಥಿರ ಪುಷ್ಪವೆಂತೆಂದು
ಅರಿದು ಅರ್ಪಿಸುವ ಜೀವರಿಗೆ ಲೇಪಿಸದು
ಪರಮದಯಾಳು ಗೋಪಾಲವಿಠ್ಠಲ ತನ್ನ
ಆರಿದಂತೆ ಫಲವೀವಾ ಶರಣರ ಜನಕೆ ||೩||

ಝಂಪೆ ತಾಳ
ಭೂತದಯಾಪುಷ್ಪ ಭೂತೇಶಗಲ್ಲದೆ
ಭೂತಾಧಾರದಿ ಇಪ್ಪ ಭೂತರಿಗೆ ಥರವೇ
ನೀತಿಲಿ ತ್ರಿವಿಧ ಜೀವರಿಗೆ ತಾ ತಪ್ಪದೆ
ಪ್ರೀತಿಲಿ ಉಣಿಸಿ ಅಜಾತನಾಗಿ ಇಪ್ಪ
ಮಾತು ಮಾತಿಗೆ ಅನಂತ ಕರ್ಮಂಗಳು
ಜ್ಞಾತವಿಲ್ಲದೆ ಮಾಳ್ಪ ಜೀವರಿಗೆ ಇದು ಸಲ್ಲ
ಭೂತರುಗಳ ಗತಿ ತಾ ತಿಳಿದು ತ್ರಿವಿಧರಿಗೆ
ನೋತಫಲವಿತ್ತು ಸಮನಾಗಿ ಇಪ್ಪುವನೆಂದು
ಈ ತೆರದಿ ತಿಳಿದು ನೀ ಭೂತದಯಾ ಪುಷ್ಪ
ಪ್ರೀತಿಯಲಿ ಅರ್ಪಿಸನ್ಯಥಾ ಚಿಂತಿಸದೆ
ದಾತ ನಮ್ಮ ಸ್ವಾಮೀ ಗೋಪಾಲವಿಟ್ಠಲ
ಸೋತೆನೆಂದ ಬಳಿಕ ಸಲಹದೆ ಬಿಡನು ||೪||

ತ್ರಿಪುಟ ತಾಳ
ಸರ್ವದಾ ಕ್ಷಮೆ ಪುಷ್ಪ ಸರ್ವೆಶಗಲ್ಲದೆ
ಗರ್ವ ತತ್ವದಿ ಬದ್ಧ ಜೀವರಿಗೆ ಸಲ್ಲ
ಶರ್ವನಲ್ಯಾದರು ಸಹಿಸಿಲ್ಲ ಈ ಕರ್ಮ
ಪೂರ್ವದ ಆಖ್ಯಾನ ಇದಕುಂಟು
ಸರ್ವ ಉತ್ತಮ ದೇವನಾರೆಂದು ಭೃಗು ಮುನಿ
ಸರ್ವಪೂರ್ಣ ಹರಿಯ ಎದಿಯ ವದ್ದ
ಪರ್ವತದೋಪಾದಿ ಇದ್ದ ಕಾರಣವಾಗಿ
ಸರ್ವೋತ್ತಮನೆಂದು ತುತಿಸಿ ನಲಿದಾ
ನಿರ್ವ್ಯಾಜದಿಂದಲಿ ನಿತ್ಯ ಕೋಪದಿ ಖೇದ
ಗರ್ವ ತತ್ವದಿ ಬದ್ಧ ಜನರಿಗೆ ಕೂಡದು
ಸರ್ವಾನಂದ ಪೂರ್ಣ ಗೋಪಾಲವಿಠಲ
ಸರ್ವೇಶಗೀ ಪುಷ್ಪ ಅರಿವ ಜೀವನೆ ಧನ್ಯ ||೫||

ಅಟ್ಟ ತಾಳ
ದಮ ಜ್ಞಾನ ಧ್ಯಾನವು ಸಮೀಚೀನ ಪುಷ್ಪವು
ರಮೆ ಈಶಗಲ್ಲದೆ ಶ್ರಮಿಸೋ ಜೀವರಿಗಿಲ್ಲಾ
ವಮನ ಕಂಡರೆ ಅಂಜೋ ಭ್ರಮಣ ಜೀವರಿಗೆ
ದಮ ಎಂಬ ಪುಷ್ಪವು ಎಂತು ದೊರೆಯುವದಯ್ಯಾ
ಮಮತಿ ಜಡದಿ ನಿಮಿಷ ಬಿಡದೆ ಇದ್ದ
ಹಮ್ಮತಿ ಜೀವನಿಗೆ ಜ್ಞಾನಪುಷ್ಪವು ಎಂತೋ
ಕ್ಷಮಿಸಿ ನೋಡಲು ಧ್ಯಾನಪುಷ್ಪ ವೆಂಬೋದು ಅಂತು
ನಿಮಿತ್ತ ಮಾತ್ರವು ಇದು ನೀಚ ಜೀವರಗಿಲ್ಲ
ಸಮ್ಮತಿಸಿ ನೋಡಿವು ಸರ್ವೋತ್ತಮನಲ್ಲವೇ
ನಿಮಿಷ ಬಿಡದೆ ಇಪ್ಪವೆಂದು ಚಿಂತನೆ ಮಾಡೆ
ದಮಜ್ಞಾನ ಧ್ಯಾನವುಳವನಾಗುವನಾ ಜೀವ
ಸುಮನಸರೊಡಿಯ ಗೋಪಾಲವಿಟ್ಠಲನು
ನಮಿಸಿ ನೆಚ್ಚಿದಂಗಿನ್ನರಿಸುವನಿದಿರಾ ||೬||

ಆದಿ ತಾಳ
ಸತ್ಯವೆಂಬುವ ಪುಷ್ಪ ಸರ್ವೆಶಗೆ ಇದು
ನಿತ್ಯ ಅನೃತ ನುಡಿವ ಜೀವಗೆ ಸಲ್ಲ
ಕತ್ತಲೆ ಒಳಗಿದ್ದ ಮತ್ತೆ ಉದಯವೆಂಬೋ
ಮಿಥ್ಯ ವಚನವಾಡಿ ಸುತ್ತುವ ಸಂಸಾರ
ಮತ್ತೆ ಇವಗೀ ಪುಷ್ಪ ಎಂತು ದೊರುವದಯ್ಯಾ
ಸತ್ಯ ಸಂಕಲ್ಪ ನಮ್ಮ ಗೋಪಾಲವಿಠ್ಠಲಗೆ
ಮತ್ತೆ ನೀ ಉಂಟೆಂದು ಮನಮುಟ್ಟಿ ತಿಳಿಯೋ ||೭||

ಜತೆ
ಭೇದವಿಲ್ಲದೀ ಪುಷ್ಪ ಇಪ್ಪವು ಹರಿಯಲ್ಲಿ
ಸಾಧಿಸರ್ಚಿಸು ಗೋಪಾಲವಿಟ್ಠಲ ಒಲಿವಾ ||೮||

ದಾಸ ಸಾಹಿತ್ಯ ಪ್ರಕಾರ
ಬರೆದವರು