ಪಾಲಿಸೋ ನರಸಿಂಹ

ಪಾಲಿಸೋ ನರಸಿಂಹ

( ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) ) ಪಾಲಿಸೋ ನರಸಿಂಹ ಪಾಲಿಸೊ ||ಪ|| ಪಾಲಿಸೊ ಪರಮಪಾವನ ಕಮ- ಲಾಲಯ ನಂಬಿದೆ ನಿನ್ನ ಆಹಾ ಬಾಲೇಂದುಕೋಟಿಯ ಸೋಲಿಪ ನಖತೇಜ ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ|| ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯ್ದೆಯೊ ಭಕ್ತಪ್ರಿಯಸಖ ಸಂದೋಹ ಮೂರುತಿ ಆಯತಾಕ್ಷ ಎಂದೆಂದು ಬಿಡದಿರು ಕೈಯ ಆಹಾ ವೃಂದಾರಕೇಂದ್ರಗಳ ಬಂದ ದುರಿತಗಳ ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧|| ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ತಾಪ, ದೂರ ಇರದಿರೊ ಹರಿ ಸಪ್ತದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹಾ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨|| ಶರಣಪಾಲಕನೆಂಬೊ ಬಿರುದು ಕೇಳಿ ತ್ವರಿತದಿ ಬಂದೆನೊ ಅರಿದು ಇನ್ನು ಪರಿಪರಿ ಆರಾಧ ಮರೆದು , ಪರ - ತರನೆ ನೋಡೆನ್ನ ಕಣ್ ತೆರೆದು ಆಹಾ ಮರಣ-ಜನನಗಳ ತರಿದು ಬಿಸುಟು ನಿನ್ನ ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ||೩|| ಸಂಸಾರಸಾಗರದೊಳಗೆ ಎನ್ನ ಹಿಂಸೆಗೊಳಿಸುವರೆ ಹೀಗೆ ಎಲೊ ಕಂಸಾರಿ ಬಾಗೆ ಅನ್ಯರಿಗೆ ಮತ್ತೆ ಸಂಶಯವಿಲ್ಲೀ ಮಾತಿಗೆ ಆಹಾ ಹಂಸಡಿಬಿಕರನ್ನು ಧ್ವಂಸ ಮಾಡಿದ ಶೌರಿ ಶಿಂಶುಮಾರಮೂರ್ತಿ ದಿವಸದಿವಸದಲ್ಲಿ ||೪|| ಸಿರಿಬೊಮ್ಮ ಭವಶಕ್ರಸುರರ ಕೈಯ ನಿರುತ ಸ್ತುತಿಸಿಕೊಂಬ ಧೀರ ಶುಭ- ಪರಿಪೂರ್ಣ ಗುಣ ಪಾರಾವಾರ ಪೊರೆ- ವರ ಕಾಣೆನಂತ ಸುಂದರ ಆಹಾ ಸ್ಮರನ ಕಾಂತಿಯ ನಿರಾಕರಿಸುವ ತೇಜನೆ ಎರವು ಮಾಡದೆ ಹೃತ್ಸರಸಿಜದೊಳು ತೋರಿ ||೫|| ಮೊದಲು ಮತ್ಸ್ಯಾವತಾರದಿ ವೇದ ವಿಧಿಗೆ ತಂದಿತ್ತೆ ವಿನೋದಿ ಆ Sಅ- ರಧಿಯೊಳು ಸುರರಿಗೋಸ್ಕರ ನೀನು ಸುಧೆಯ ಸಾಧಿಸಿ ಉಣಿಸಿ ದಿ ಆಹಾ ಅದ್ಭುತ ಭೂಮಿಯ ತೆಗೆದೊಯ್ದನ ಕೊಂದು ಮುದದಿ ಹಿರಣ್ಯಕನುದರ ಬಗೆದ ಧೀರ ||೬|| ಬಲಿಯ ಮನೆಗೆ ಪೋಗಿ ದಾನ ಬೇಡಿ ತುಳಿದೆ ಪಾತಾಳಕ್ಕೆ ಅವನ ಪೆತ್ತ - ವಳ ಶಿರತರಿದ ಪ್ರವೀಣ ನಿನ್ನ ಚಲಕೆಣೆಗಾಣೆ ರಾವಣ ನ ಆಹಾ ತಲೆಯನಿಳುಹಿ ಯದುಕುಲದಿ ಜನಿಸಿ ಮತ್ತೆ ಲಲನೇರ ಪತಿವ್ರತವಳಿದ ಅಶ್ವಾರೂಢ ||೭|| ಮಾನಸಪೂಜೆಯ ದಯದಿ ಇತ್ತ್ಯು ಶ್ರೀನಾಥ ಕಳೆ ಭವವ್ಯಾಧಿ, ಕಾಯೊ ಅನಾಥ ಬಂಧು ಸುಮೋದಿ ಚತು- ರಾನನಪಿತ ಕೃಪಾಂಬೋಧಿ ಆಹಾ ನಾನೊಬ್ಬರನರಿಯೆ ಗಾನವಿನೋದಿಯೆ ಏನೇನು ಮಾಡುವ ಸಾಧನ ನಿನ್ನದು ||೮|| ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾ ಆಗಬಲ್ಲುದೆ ಇದು ಚೆನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ಆಹಾ ಎನ್ನಪರಾಧವ ಇನ್ನು ನೀ ನೋಡದೆ ಮನ್ನಿಸು ದಯದಿ ಜಗನ್ನಾಥ ವಿಠಲ ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು