ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು

ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು

( ರಾಗ ಆರಭಿ ಅಟ ತಾಳ) ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು ತಿಳಿಯಲಿಲ್ಲ , ದಯಾ- ರೂಪ ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ || ಕಾಲ್ಗಳಿಂದಲಿ ತೀರ್ಥಯಾತ್ರೆಯ ನಾನಂತೂ ಮಾಡಲಿಲ್ಲ , ಹರಿ- ಪಾಲ್ಗಡಲಶಾಯಿ ನಿನ್ನ ದಿವ್ಯಕಥೆಯನ್ನು ಕೇಳಲಿಲ್ಲ ಕೂಳ್ಗಳಾಶೆಯಿಂದ ನಿನ್ನ ನೈವೇದ್ಯವನುಣ್ಣಲಿಲ್ಲ , ಇಂಥ ಸಾಲ್ಗಳ ಪಾಪದಿಂ ಎನ್ನ ಪಾಲಿಪ ಸ್ವಾಮಿ ನೀನೆಯಲ್ಲ || ಕಣ್ಣುಗಳಿಂದ ನಿನ್ನಯ ದಿವ್ಯ ಮೂರ್ತಿಯ ನೋಡಲಿಲ್ಲ , ಶ್ರುತಿ- ಸನ್ನುತ ಮಹಿಮೆಯ ಅನುದಿನ ನಾನು ಕೊಂಡಾಡಲಿಲ್ಲ ಹೆಣ್ಣು ಹೊನ್ನು ಮೆಚ್ಚಿ ನಿನ್ನ ದಾಸರ ದಾಸ್ಯ ಮಾಡಲಿಲ್ಲ , ಮುನಿ- ಸನ್ನುತ ವರಪಾದಪದ್ಮಯುಗಂಗಳ ಸ್ಮರಿಸಲಿಲ್ಲ || ಕರದಿಂದ ನಿನ್ನ ಸುಮೂರ್ತಿಪೂಜೆಯನ್ನು ಮಾಡಲಿಲ್ಲ , ಇಹ- ಪರ ಎರಡನು ಬಿಟ್ಟು ವಿಷಯದೊಳನುದಿನ ಬಾಳ್ವೆನಲ್ಲ ಗುರುಹಿರಿಯರ ಮಾತ ಕೇಳದೆ ನಾ ಬಲು ಕೆಟ್ಟೆನಲ್ಲ , ಹರಿ ಪರಮ ಪುರುಷ ನೀನಲ್ಲದೆ ಜಗದೊಳು ಕಾವರಿಲ್ಲ || ಹೊಟ್ಟೆಯಾಸೆಗಾಗಿ ದುಷ್ಟರ ಸೇವೆಗೆ ನಿಂತೆನಲ್ಲ , ಯಮ ಕುಟ್ಟಿ ಕೊಲ್ಲಧಾಂಗೆ ನೀನೆ ರಕ್ಷಿಸಬೇಕು ಸಿರಿಯನಲ್ಲ ಅಷ್ಟೂ ತತ್ವೇಶರ ಸ್ವಾಮಿ ನೀನಲ್ಲದೆ ಬೇರೆ ಇಲ್ಲ, ಇನ್ನು ದುಷ್ಟಕೃತ್ಯಕೆ ಮನವೆರಗದಂದದಿ ಮಾಡು ಶ್ರೀ ಗೋಪಾಲ || ಜಗದೊಳಗೆನ್ನಂಥಾ ಪಾಪಿಗಳಿನ್ಯಾರು ಇಲ್ಲವಲ್ಲ , ಹರಿ- ಸುಗುಣಪೂರ್ಣ ನಿನ್ನಂಥ ಕೃಪಾಂಬುಧಿ ಜಗದೊಳಿಲ್ಲ ನಿಗಮಗೋಚರ ನಿನ್ನ ಮಹಾಮಹಿಮೆಯ ನಾನು ತಿಳಿಯಲಿಲ್ಲ ಜಗದ್ಗುರುವಿನ ಗುರುವೆ ಪುರಂದರವಿಠಲ ನೀನಲ್ಲದಿನ್ನಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು