ದಡಮಾಡಿದರು ಯಮನಾಳುಗಳು

ದಡಮಾಡಿದರು ಯಮನಾಳುಗಳು

(ರಾಗ ನಾದನಾಮಕ್ರಿಯೆ ಆದಿತಾಳ) ದಡಮಾಡಿದರು ಯಮನಾಳುಗಳು ಓಡಿ ಬಂದರು ಏಳೇಳೆನುತ ಏಳಾಲೆಳೆದರು , ಪಾಪಿಯ ಬೀಳಾಲೆಳೆದರು || ಪ|| ಭವಂತಿ ಮಾಳಿಗೆ ದೊಡ್ಡ ಪಡಸಾಲೆ ಚಿಕ್ಕಮಕ್ಕಳು ದೊಡ್ಡಮಕ್ಕಳು ಆದ ಮದುವೆಯು ಆಗದ ಮದುವೆಯು ಒಂದೊಂದು ಸಾವಿರ ಸಾಲವ ಕೊಟ್ಟು ಬಡ್ಡಿಬಾಕಿ ಬರಲೇ ಇಲ್ಲ ಬಿಟ್ಟು ಹೇಗೆ ಬರಲೊ , ಮನ ಕೆಟ್ಟು ಹೇಗೆ ಬರಲೊ || ಚಿತ್ರದ ಮನೆಗಳು ಬೆಳ್ಳಿಕಂಬ ಚಿನ್ನದ ಬೋದಿಗೆ ರತ್ನದ ಕೆಲಸ ಉಪ್ಪರಿಗೆ ನೋಡಿ ಪ್ರೀತಿಯಾಗಿ ನಾನಿರುವೋದು ಕಂಡು ಕರೆವೊರೇನೊ* ಎನ್ನ , ಯಮನೆ ಎಳೆವೊರೇನೊ ಎನ್ನ || ನಿನ್ನೆ ಮೊನ್ನೆ ಒಬ್ಬಳು ಕನ್ಯೆ ಮದುವ್ಯಾದೆ ಪೊನ್ನು ಭಂಗಾರ ಬೆಳ್ಳಿ ಬಹಳ ಎನ್ನ ಮನೆಯಲಿ ಕರೆವೋದು ನೂರೆಂಟು ಎಮ್ಮೆ ಉಂಬೊ ಉಡುವೊ * ಪ್ರಾಯವ ಬಿಟ್ಟು ನಿನ್ನಾಣೆ ಬರಲಾರೆನೊ , ಯಮನೆ ಎನ್ನಾಣೆ ಬರಲಾರೆನೊ || ದಡ್ಡಂ ತೊಕ್ಕರು ದೂತರು ಕೋಪದಿ ಕಡ್ಡಾಯ ಮಾಡಿ ಕರೆಯಲು ಅವನ ಬಡ್ಡಿ ಫಣಿವರ ಬರಲೇ ಇಲ್ಲ ದೊಡ್ಡವರು ಬಂದರಲ್ಲ ಇನ್ನು ಮೂರು ಚಿಕ್ಕವರು ಬಂದರಲ್ಲ || ದೊಡ್ಡ ತಲೆ ಯಮನ ದೂತರು ಗಡ್ಡದ ದೂತರು ಓಡಿ ಬಂದರು ದೊಡ್ಡ ನಾಯಿಗಳ ಟೊಂಕಕೆ ಬಿಗಿದು ಚಿಕ್ಕ ನಾಯಿಗಳ ಎಡಕೈಯಲಿ ಕೊಂಡು ಬತ್ತೀಸಾಯುಧ ಮೈಯಲಿ ಧರಿಸಿ ದೊಡ್ಡ ಈಟಿಯವರೊ ಇನ್ನು ಮೂರು ಚಿಕ್ಕ ಈಟಿಯವರೊ || ಕತ್ತಲು ಎಂಬೋದು ಮುನ್ನೂರು ಮೂ- ವತ್ತೆರಡು ಗಾವುದ, ಗೇಣಿಗೆ ಒಂದು ಉಕ್ಕಿನ ಧ್ವಜಗಳು, ಅದರಲಿ ನೆಗ್ಗಿನ ಮುಳ್ಳು ನಡೆಯಲಾರೆ ನಾನು , ಯಮನೆ ತಡೆಯಲಾರೆ ನಾನು || ಕಾಶೀತೀರ್ಥವ ಬೇಡದೆ ಇವನು ಶುಂಠಿ ಬೆಲ್ಲವ ಬೇಡಿದನಿವನು ಕಾಲಕಂಟಕರು ಸೀಸವ ಕಾಸಿ ಹೊಯಿದರು ಬಾಯೊಳಗೆ , ಅವನಿಗೆ ಹೊಯಿದರು ಬಾಯೊಳಗೆ || ಏನೇನು ಪಾಪವ ಮಾಡಿದನಿವನು ಏನೇನು ಕರ್ಮವ ಮಾಡಿದನಿವನು ಅಕ್ಕತಂಗೇರ ಒದ್ದನಿವನು ತಾಯಿತಂದೆಗಳ ಬಯ್ದವನು ದಾರಿಗೆ ಮುಳ್ಳು ಹಾಕಿದನಿವನು ಹರಿದಿವಸದಲಿ ಉಂಡವನಿವನು ನರಕಕ್ಕೆ ನೂಕಿರೊ , ಕುಂಭೀ- ಪಾಕಕ್ಕೆ ನೂಕಿರೊ || ಹಿಂದೆ ಮಾಡಿದವರಿಗೆ ಹೀಗೆ ಇಷ್ಟು ತೆರವಾಯಿತು ಮುಂದೆ ಜನರು ತಿಳಿದು ಬದುಕಿರಿ ಶ್ರೀಗುರುಪುರಂದರವಿಠಲರಾಯರ ಸ್ಮರಣೆಯ ಮಾಡಿರೊ, ಜನರು ಧರ್ಮವ ಮಾಡಿರೊ || ( * ಇಲ್ಲಿಯ ವೊ = ವ್+ಒ )
ದಾಸ ಸಾಹಿತ್ಯ ಪ್ರಕಾರ
ಬರೆದವರು