ತುತ್ತುರು ತೂರೆಂದು ಬತ್ತೀಸ ರಾಗಗಳನು

ತುತ್ತುರು ತೂರೆಂದು ಬತ್ತೀಸ ರಾಗಗಳನು

( ರಾಗ ಆನಂದಭೈರವಿ ಅಟತಾಳ) ತುತ್ತುರು ತೂರೆಂದು ಬತ್ತೀಸ ರಾಗಗಳನು ಚಿತ್ತವಲ್ಲಭ ತನ್ನ ಕೊಳಲನೂದಿದನು ||ಪ|| ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ ಕೇಳಿ ರಮಣಿ(ಯ)ರತಿ ದೂರದಿಂದ ಫಲಮಂಜರಿ ಗೌಳಿ ದೇಶಾಕ್ಷರಿ ರಾಗಂಗಳನು ನಳಿನನಾಭನು ತನ್ನ ಕೊಳಲನೂದಿತನು || ಅಂಗಾಲಿಗೆ ವಂಕಿಕ್ಕಿ ಮುಂಗಾಲಿಗೆ ಕಡಗವನಿಟ್ಟು ಉಂಗುಷ್ಠದಲಿ ಉಂಗುರವ ಹಾಕಿ ಅಂಗಣಕ್ಕೆ ಬಂದು ನಿಂತು ಹಿಂಗಣಕ್ಕೆ ಮೊಲೆಕಟ್ಟುವಳು ಗಂಗಾಜನಕನ ಬಳಿಗೆ ಶೃಂಗರಿಸಿ ಬಂದು ನಿಂತಳು || ಕಣ್ಣಿಗೆ ಕಾಡಿಗೆಯೆಂದು ಚೆನ್ನೆ ಶ್ರೀಗಂಧವನಿಟ್ಟು ಬೆಣ್ಣೆನೆಲ್ಲವು ತಮ್ಮ ಕರುಗಳಿಗಿಕ್ಕಿ ಅಣ್ಣೆನ್ನಾರುಣ್ಣೆಣ್ಣೆಂದು ಗಂಡಗೆ ಮುರವನಿಕ್ಕಿ ಚಿನ್ನ ಕೈಯಿಂದಲಿ ಹಸ್ತಕ್ಕೆ ಪನ್ನೀರು ತಂದಿರಿಸಿದಳು || ಹಸುವಿನ ಮೊಲೆಗೆ ತಮ್ಮ ಶಿಶುವನು ಉಣಚಾಚಿ ಪಶುಗಳ ಕರುಗಳ ಪಿಡಿದೆತ್ತಿಕೊಂಡು ಬಿಸಿ ಬಿಸಿ ಓಗರವೆಲ್ಲ ಪತಿಯೆಂದು ಪಶುಗಳಿಗಿಕ್ಕಿ ಕುಸುಮನಾಭನ ಬಳಿಗೆ ಹಸ್ತವಲಿದು ನಿಂತಳು || ತುರುಹಿಂಡುಗಳ ಕಾಯ್ದು ಸುರರಿಗೆ ಸುಖವನಿತ್ತೆ ತರುಣಿ ನಿಮ್ಮ ಗಂಡರು ಬೈವರಮ್ಮ ಮರುಳಾಗದೆ ನೀವು ನಿಮ್ಮ ಮನೆಗಳನೆ ಬಿಟ್ಟುಕೊಂಡು ಇರುವುದು ಉಚಿತವಲ್ಲ ಭರದಿಂದ ಹೋಗಿರೆ || ಮನೆಯೆಂಬೊದಿಲ್ಲ ಮನೆ ನಮಗೆ ಬೇರೊಂದಿಲ್ಲ ಮನೆ ಉಂಟೆ ಶ್ರೀ ಕೃಷ್ಣ ನಿನ್ನ ಬಿಟ್ಟು ಮನವಿಲ್ಲದೆ ಮನೆಯು ಕಾಣೆ ಮನೆ ನಮಗೆ ಮತ್ತೊಂದು ಇಲ್ಲ ಘನಮಹಿಮ ಶ್ರೀ ಕೃಷ್ಣ ನಿಮ್ಮ ಮನೆಯೆಂಬೋದು ಘನಮಹಿಯು || ನಿಂದು ತಲೆಯ ಬಾಗಿ ಬಂದು ಕಣ್ಣೀರನೆ ಒರೆಸಿ ಚಂದದುಂಗುಷ್ಠದಲಿ ಬರೆವುತಲಿ ಅಂದೆಂದು ನಮ್ಮ ಕೂಡಿ ಹಂಬಲ ಯಾಕೋ ನಿನ್ನ ಅಂದೇವೆ ಪುರಂದರವಿಟ್ಠಲರಾಯನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು