ಜಾಲಿಯ ಮರವಂತೆ ಧರೆಯೊಳು ದುರ್ಜನರು

ಜಾಲಿಯ ಮರವಂತೆ ಧರೆಯೊಳು ದುರ್ಜನರು

(ರಾಗ ಮೋಹನ ಅಟತಾಳ) ಜಾಲಿಯ ಮರವಂತೆ ಧರೆಯೊಳು ದುರ್ಜನರು ಜಾಲಿಯ ಮರವಂತೆ ||ಪ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಅ.ಪ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ || ಊರ ಹಂದಿಗೆ ಷಡ್ರಸಾನ್ನವನಿಕ್ಕಲು ನಾರುವ ದುರ್ಗಂಧ ಬಿಡುವುದುಂಟೆ ಘೋರ ಪಾಪಿಗೆ ತತ್ವಜ್ಞಾನ ಹೇಳಿದರೆ ಕ್ರೂರಕರ್ಮವ ಬಿಟ್ಟು ಸುಜನನಾಗುವನೆ || ತನ್ನಿಂದ ಉಪಕಾರ ತಟುಕಾದರೂ ಇಲ್ಲ ಬಿನ್ನಣ ಮಾತಿಗೆ ಕೊನೆಯಿಲ್ಲವು ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು