ಜಯ ಮಂಗಳಂ ನಿತ್ಯ ಶುಭ ಮಂಗಳಂ

ಜಯ ಮಂಗಳಂ ನಿತ್ಯ ಶುಭ ಮಂಗಳಂ

( ರಾಗ ಭೈರವಿ ಅಟತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ದುರುಳ ತಮವನು ಕದ್ದು ಪಾತಾಳದಲಿ ಇರಲವನ ಕೊಂದು ವೇದಾವಳಿಗಳ ಸರಸಿಜೋದ್ಭವಗಿತ್ತು ಸುರಮುನಿಗಳನೆಲ್ಲ ಪೊರೆವ ಶ್ರೀ ಮಚ್ಛಾವತಾರ ಹರಿಗೆ || ಸುರರು ದೈತ್ಯರು ಕೂಡಿ ಸಿಂಧುವನು ಮಥಿಸುತಿರೆ ಗಿರಿ ಮುಣುಗಿ ಪಾತಾಳಕೆ ಪೋಗೆ ಭರದಿಂದಲಿ ಬಂದು ಗಿರಿಯ ಬೆನ್ನಿಲ್ಹೊತ್ತು ಸುರರ ರಕ್ಷಿಸಿದ ಶ್ರೀ ಕೂರ್ಮ ಹರಿಗೆ || ಭೂಮಿಯನು ಹಿರಣ್ಯಾಕ್ಷನೆಂಬೊ ದೈತ್ಯನು ಸುತ್ತಿ ಭೀಮವಿಕ್ರಮನು ಪಾತಾಳಕೊಯ್ಯೆ ತಾಮರಸಸಂಭವನು ಬಿನ್ನವಿಸಲವನ ಕೊಂದು ಭೂಮಿಯನು ತಂದ ಶ್ರೀವರಹ ಹರಿಗೆ || ಪರಮಭಾಗವತ ಪ್ರಹ್ಲಾದನ ಹಿರಣ್ಯಕನು ಪರಿಪರಿಯ ಬಾಧೆಯಿಂದಲಿ ಪೀಡಿಸೆ ಕರುಣಾಳು ಕೋಪದಲಿ ದೈತ್ಯನುದರವ ಬಗಿದ ಶರಣರಕ್ಷಕನಾದ ನರಸಿಂಹಗೆ || ಬಲಿಚಕ್ರವರ್ತಿ ಭೂಮಿಯ ಧಾರೆಯೆರೆಯಲು ಇಳೆಯನಳೆದವನ ಸುತಳಕಿಳುಹಿದೆ ಸಿಲುಕಿ ಭಕುತಿಗೆ ಮೆಚ್ಚಿ ಬಾಗಿಲ ಕಾಯಿದೆ ಬಲವಂತ ವಾಮನಾವತಾರಹರಿಗೆ || ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ ಕೀರ್ತಿಯನು ಲೋಕದೊಳು ವಿಸ್ತರಿಸಿದೆ ಪಾರ್ಥಿವಾಂತಕ ಬಾಹುಬಲ ಪರಿಪೂರ್ಣನೆ ಆರ್ತಬಾಂಧವ ಭಾರ್ಗವರಾಮಗೆ || ದಶರಥನ ಮನೆಯಲುದ್ಭವಿಸಿ ರಾವಣಾಸುರನ ದಶಶಿರವನೀಡಾಡಿ ಅವನನುಜಗೆ ವಸುಧಾಧಿಪತ್ಯವನು ಲಂಕೆಯೊಳಗಿತ್ತ ಅಸಮವಿಕ್ರಮ ರಾಮಚಂದ್ರಹರಿಗೆ || ಯದುಕುಲದಲಿ ಬಂದು, ಕೊಂದು ಕಂಸನನಂದು ಮುದದಿ ಪಾಂಡವರನು ಉದ್ಧರಿಸಿದೆ ಒದಗಿ ಕೌರವಬಲವ ಸಂಹರಿಸಿ ಪದವಿತ್ತು ಮುದದಿ ಮನ್ನಿಸಿದ ಶ್ರೀಕೃಷ್ಣ ಹರಿಗೆ || ತ್ರಿಪುರದಮರಾರಿಯರ ಸತಿಯರ ಪತಿವ್ರತವ- ನಪಹರಿಸಿ ದಿವ್ಯ ಮೋಹರೂಪದಿ ತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತ ಅಪರಿಮಿತ ಬುದ್ಧಾವತಾರ ಹರಿಗೆ || ಕಲಿಯುಗದ ಕಡೆಯಲ್ಲಿ ಖಳನೃಪರನೆಲ್ಲವನು ತುಳಿಸಿ ಕುದುರೆಯ ಖುರದಪುಟಗಳಿಂದ ಸುಲಭದಿಂ ನಡೆಸುತ ಕೃತಯುಗದ ಧರ್ಮವನು ಬಲ್ಲಂಥ ಕಲ್ಕ್ಯಾವತಾರ ಹರಿಗೆ || ಮಂಗಳ ಪದಂಗಳನು ಭಕುತಿಯಿಂದಲಿ ಮೋಹನತ- ರಂಗನೇರೆಲ್ಲ ರಾಗದಿ ಪಾಡಲು ಮಂಗಳಾತ್ಮಕ ಸಿರಿಪುರಂದರವಿಠಲಗೆ ಅಂಗನೇರೆಲ್ಲ ಆರತಿಯೆತ್ತಿರೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು