ಕಟಿಯಲ್ಲಿ ಕರವಿಟ್ಟನು, ಜಗದೀಶನು

ಕಟಿಯಲ್ಲಿ ಕರವಿಟ್ಟನು, ಜಗದೀಶನು

(ರಾಗ ತೋಡಿ ಛಾಪುತಾಳ) ಕಟಿಯಲ್ಲಿ ಕರವಿಟ್ಟನು, ಜಗದೀಶನು ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರ ರಾಜರು ಮೊದಲಾದ ಸುರರೆಲ್ಲರು ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು ರಾಜೀವಾಕ್ಷನು ಎತ್ತಿದಾಯಾಸದಿಂದಲೋ || ಗೊಲ್ಲಬಾಲಕರೊಡಗೂಡಿ ತಾ ಬಂದು ಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದು ಬಲ್ಲಿದ ತೃಣಾವರ್ತ ಮೊದಲಾದಸುರರನ್ನು ಎಲ್ಲರನ್ನು ಕೊಂದ ಆಯಾಸದಿಂದಲೊ || ಧರಣಿಯನು ತಂದ ದನುಜ ಹಿರಣ್ಯಕನ ಕೋರೆದಾಡೆಯಿಂದ ಸೀಳಿದಿಂದಲೊ ವಾರಿಜಮುಖಿ ಸರ್ವಕಾಲದಲಿ ನಿಂತು ಸೇರಿ ಸುರತ ಮಾಡಿದಾಯಾಸದಿಂದಲೊ || ಸುರಪತನಯಗೆ ಸಾರಥ್ಯವನು ಮಾಡಿ ಭರದಿಂದ ಚಕ್ರವ ಪಿಡಿದಿಂದಲೊ ಪರಿಪರಿವಿಧದಿಂದ ಕುದುರೆಗಳನೆ ತೊಳೆದು ಪರಿಪರಿ ಕೆಲಸದ ಆಯಾಸದಿಂದಲೊ || ಮುದದಿಂದ ವ್ರಜದ ಹದಿನಾರು ಸಾವಿರ ವನಿತೆಯರಾಳಿದ ಮದದಿಂದಲೊ ಮದಗಜಗಮನೇರ ಮಧುರಾಂತಕನ ಒದಗಿ ಮಾವನ ಕೊಂದ ಆಯಾಸದಿಂದಲೊ || ಮಮತೆಯಿಂದಲಿ ಭಕ್ತಜನರು ನಿಮ್ಮ ಚರಣ- ಕಮಲಯುಗವನು ಸ್ತುತಿಸುತಿರಲು ಮಮತೆಯಿಂದಲಿ ಬಂದು ಅಭಯಗಳನೆ ಕೊಟ್ಟು ಕಮಲನಾಭ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು