ಏನು ಮಾಡಲಯ್ಯ ಬಯಲಾಸೆ ಬಿಡದು

ಏನು ಮಾಡಲಯ್ಯ ಬಯಲಾಸೆ ಬಿಡದು

(ಮುಖಾರಿ ರಾಗ , ಝಂಪೆ ತಾಳ ) ಏನು ಮಾಡಲಯ್ಯ ಬಯಲಾಸೆ ಬಿಡದು ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ||ಪ|| ಜ್ಯೋತಿಮಯವಾದ ದೀಪದ ಬೆಳಕಿಗೆ ತಾನು ಕಾತುರದಿ ಬೀಳುವಾ ಪತಂಗದಂದದಲಿ ಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವ ಧೂರ್ತೆಯರ ನೋಡುವೀ ಚಕ್ಷುವಿಂದ್ರಿಯಕೆ ||೧|| ಅಂದವಹ ಸಂಪಿಗೆಯ ಅರಳ ಪರಿಮಳ ಉಂಡು ಮುಂದುವರಿಯದೆ ಬೀಳ್ಪ ಮಧುಪನಂದದಲಿ ಸಿಂಧುರದ ಗಮನೆಯರ ಸಿರಿಮುಡಿಯೊಳಿಪ್ಪ ಹೂ- ಗಂಧ ವಾಸಿಸುವ ನಾಸಿಕದ ಇಂದ್ರಿಯಕೆ ||೨|| ಗಾಣದ ತುದಿಯೊಳಿರ್ಪ ಭೂನಾಗನಂ ಕಂಡು ಪ್ರಾಣಾಹುತಿ ಎಂದು ಸವಿವ ಮೀನಂತೆ ಏಣಾಕ್ಷಿಯರ ಚಂದುಟಿಯ ಸುಧೆಯ ಸವಿದು ತಾ ಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ||೩|| ದಿಮ್ಮಿಡುವ ಗಣಗಣಾ ಎಂಬ ಘಂಟೆಯ ರವಕೆ ಬೆಮೆಗೊಳುತ್ತಿರುವ ಆ ಹರಿಣನಂದದಲಿ ರಮಣಿಯರ ರಂಜಿಕದ ನುಡಿಯನ್ನು ಕೇಳ್ದು ಪ್ರ- ಣಮವೆಂದು ತೋಷಿಸುವ ಕರ್ಣೇಂದ್ರಿಯಕ್ಕೆ ||೪|| ತ್ವಕ್ಕು ಮೊದಲಾದ ಪಂಚೇಂದ್ರಿಯದೊಳು ಸಿಕ್ಕಿರೆ ಕಕ್ಕುಲಿತೆಗೊಂಬುದಿದ ನೀನು ಬಿಡಿಸಯ್ಯ ಸಿಕ್ಕು ಮಾಡಲಿ ಬೇಡ ನೆಲೆಯಾದಿಕೇಶವನೆ ದಿ(/ರಿ?) ಕ್ಕಾಗಿ ಎನ್ನ ನಿನ್ನಂಘ್ರಿಯೊಳಗಿರಿಸೋ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು