ಎಷ್ಟು ಸಾಹಸವಂತ ನೀನೇ ಬಲವಂತ

ಎಷ್ಟು ಸಾಹಸವಂತ ನೀನೇ ಬಲವಂತ

'ಎಷ್ಟು ಸಾಹಸವಂತ ನೀನೇ ಬಲವಂತ'
ರಚನೆ: ಶ್ರೀವಾದಿರಾಜ ಯತಿಗಳು


ಎಷ್ಟು ಸಾಹಸವಂತ ನೀನೇ ಬಲವಂತಾ ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತಾ   || ಪ ||
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ

ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿ ಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ
ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ
    [ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯ ಸೀತಾಯಪತಯೇ ನಮಃ ]
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ   || 1 ||

ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರೆಯ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರನ ಬಲವನು ಮುರಿದು   || 2 ||

ಶೃಂಗಾರವನದೊಳಗೆ ಇದ್ದ ರಕ್ಕಸರ ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಯ ಕುವರನ ಭಂಜಿಸಿ ಬಿಸುಟೆಯೋ ಬಂದ ರಕ್ಕಸರ
ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ್ತಾ ಕರೆಸಿದಾ ಇಂದ್ರಜಿತುವನೆ
ಚೋರಕಪಿಯನು ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ   || 3 ||

ಪಿಡಿದನು ಇಂದ್ರಜಿತು ಕಡುಕೋಪದಿಂದಾ ಹೆಡೆಮುರಿ ಕಟ್ಟಿದಾ ಬ್ರಹ್ಮಾಸ್ತ್ರದಿಂದಾ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ
ಕಂಡನು ರಾವಣನುದ್ದಂಡ ಕಪಿಯನು ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು   || 4 ||

ಛಲವ್ಯಾಕೋ ನಿನಗಿಷ್ಟು ಎಲವೋ ಕೋಡಗನೇ ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನು
ಬಲವಂತ ರಾಮರ ಬಂಟ ಬಂದಿಹೆನು ಹಲವು ಮಾತ್ಯಾಕೊ ಹನುಮನು ನಾನೆ
ಬಡ ರಾವಣನೆ ನಿನ್ನ ಬಡಿದು ಹಾಕುವೆನು ಒಡೆಯನಪ್ಪಣೆಯಿಲ್ಲ ಎಂದು ತಾಳಿಹೆನು
ಹುಡಿಯೇಳಿಸುವೆನು ಖುಲ್ಲ ರಕ್ಕಸನೆ ತೊಡೆವೆನು ನಿನ್ನ ಹಣೆಯ ಅಕ್ಷರವಾ   || 5 ||

ನಿನ್ನಂಥಾ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿಯುಂಟು ಹೇಳೋ ನೀ ತ್ವರಿಯಾ
ನನ್ನಂಥ ದೂತರು ನಿನ್ನಂಥ ಪ್ರೇತರು ಇನ್ನೂರು ಮುನ್ನೂರು ಕೋಟಿಗಳರಿಯ
ಕಡುಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ ಒಡನೆ ಮುತ್ತಿದರು ಗಡಿಮನೆಯವರು   || 6 ||

ತಂದರು ವಸನವ ತಂಡ ತಂಡದಲೀ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ
ಶಾಲು ಸಕಲಾತಿಯು ಸಾಲದೆ ಇರಲು ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ   || 7 ||

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣುಕಿ ನೋಡುತ ಅಸುರನಣಕಿಸುತ
ಝಣಝಣಝಣರನೆ ಬಾಲದ ಘಂಟೆಯು ಮನದಿ ಶ್ರೀರಾಮರ ಪಾದವ ನೆನೆಯುತಾ
ಮಂಗಳಂ ಶ್ರೀರಾಮಚಂದ್ರ ಮೂರುತಿಗೆ ಮಂಗಳಂ ಸೀತಾದೇವಿ ಚರಣ೦ಗಳಿಗೆ
ಮಂಗಳವೆನುತಾ ಲಂಕೆಯ ಸುಟ್ಟು ಲಂಘಿಸಿ ಅಸುರನ ಗಡ್ಡಕೆ ಹಿಡಿದ   || 8 ||

ಹತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ
ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚತುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ   || 9 ||

ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಧಗ್ಗನೆ ಪೇಳ್ದರು ರಾವಣಗಂದು
ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡು ಅಯೋಧ್ಯೆಯ ದೇವ ಶ್ರೀರಾಮರು ರಾಜ್ಯವಾಳಿದರು   || 10 ||

ಶಂಖದೈತ್ಯನ ಕೊಂದೆ ಶರಣು ಶರಣಯ್ಯಾ ಶಂಖಗಿರಿಯಲಿ ನಿಂದ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನ ಪದವಿಯ   || 11 ||
______________________________________________________________________

ಅಟ್ಟು = ಬೆನ್ನುಹತ್ತಿ ಹೋಗು, ಓಡಿಸು
ತಾಮಸ = ತಡ (delay)
ಭಂಡು = ಅವಮಾನ
ಹುಡಿ = ಧೂಳು, ಮಣ್ಣು. ಹುಡಿಯೇಳಿಸು = ಧೂಳೆಬ್ಬಿಸು
ಖುಲ್ಲ = ಕ್ಷುದ್ರತೆ, ಅಲ್ಪವಾದ
ವಸನ = ಬಟ್ಟೆ
ಸಕಲಾತಿ = ಒಂದು ಬಗೆಯ ಶ್ರೇಷ್ಟವಾದ ಉಣ್ಣೆ ಬಟ್ಟೆ
ಚಿತ್ರ = (ನಾ)ಆಶ್ಚರ್ಯ, (ಗು) ಚಮತ್ಕಾರ ಪ್ರಧಾನವಾದ.  ಚಿತ್ರದಿ ನಡೆದನು = ಆಶ್ಚರ್ಯಕರವಾಗಿ, ಚಮತ್ಕಾರದಂತೆ
ವೆಗ್ಗಳ = ಹೆಚ್ಚಳ
______________________________________________________________________

ದಾಸ ಸಾಹಿತ್ಯ ಪ್ರಕಾರ