ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ

ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ

(ಕೇದಾರಗೌಳ ರಾಗ ಆದಿತಾಳ) ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ||ಪ|| ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ ಬೇಸರಿಸಿ ಬೇಡ ಬಂದುದಿಲ್ಲ ವಾಸುದೇವನೆ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕೆಂದರೆ ||೧|| ಸತಿಸುತರುಗಳ ಸಹಿತನಾಗಿ ನಾ ಹಿತದಿಂದ ಇರಬೇಕೆಂಬೊದಿಲ್ಲ ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತವನೆ ಕೊಡು ಸಾಕೆಂದರೆ ||೨|| ಸಾಲವಾಯಿತು, ಸಂಬಳ ಎನಗೆ ಸಾಲದೆಂದು ಬೇಡ ಬಂದುದಿಲ್ಲ ನಾಲಗೆಯಲಿ ನಿನ್ನ ನಾಮದುಚ್ಚರಣೆಯ ಪಾಲಿಸಬೇಕೆಂದು ಬೇಡಿದೆನಲ್ಲದೆ ||೩|| ಒಡವೆ ಒಡ್ಯಾಣಗಳಿಲ್ಲೆಂದು ಬಡವನೆಂದು ಬೇಡಬಂದುದಿಲ್ಲ ಒಡೆಯ ನಿನ್ನಡಿಗಳಿಗೆರಗುವುದಕೆ ಮನ ಬಿಡದಿಹದೊಂದನು ಕೊಡು ಸಾಕೆಂದರೆ ||೪|| ಆಗಬೇಕು ರಾಜ್ಯಭೋಗಗಳೆನಗೆಂದು ಈಗ ನಾನು ಬೇಡಬಂದುದಿಲ್ಲ ನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು