ಆರಿಗೆ ವಧುವಾದೆ ಅಂಬುಜಾಕ್ಷಿ

ಆರಿಗೆ ವಧುವಾದೆ ಅಂಬುಜಾಕ್ಷಿ

(ರಾಗ ಕಲ್ಯಾಣಿ ಆದಿತಾಳ) ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ|| ಶರಧಿಬಂಧನ ರಾಮಚಂದ್ರಮೂರುತಿಗೋ ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ ಸರಸಿಜನಾಭ ಜನಾರ್ಧನಮೂರುತಿಗೋ ಎರಡು ಹೊಳೆಯ ರಂಗಪಟ್ಟಣವಾಸಗೋ || ಚೆಲುವ ಬೇಲೂರ ಚೆನ್ನಿಗರಾಯನಿಗೋ ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ ಇಳೆಯೊಳು ಪಂಢರೀಪುರನಿಲಯ ವಿಠಲೇಶಗೋ ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ || ಮಲಯಜಗಂಧಿ ಬಿಂದುಮಾಧವರಾಯಗೋ ಸುಲಭದೇವರ ಪುರುಷೋತ್ತಮನಿಗೋ ಫಲದಾಯಕ ನಿತ್ಯಮಂಗಳನಾಯಕಗೋ ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ || ವಾಸವಾರ್ಚಿತ ಕಾಂಚಿ ವರದರಾಜಮೂರುತಿಗೋ ಅಸುರಾರಿ ಶ್ರೀಮುಷ್ಣದಾದಿವರಹನಿಗೋ ಶೇಷಶಾಯಿಯಾದ ಶ್ರೀರಂಗನಾಯಕಗೋ ಸಾಸಿರನಾಮದೊಡೆಯ ಅಳಗಿರೀಶಗೋ || ಶರಣಾಗತರ ಪೊರೆವ ಶಾರ್ಙ್ಗಪಾಣಿಗೋ ವರಗಳೀವ ಶ್ರೀನಿವಾಸಮೂರುತಿಗೋ ಕುರುಕುಲಾಂತಕ ರಾಜಗೋಪಾಲಮೂರುತಿಗೋ ಸ್ಥಿರವಾದ ಪುರಂದರವಿಠಲರಾಯನಿಗೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು