ಅಂದೆ ನಿರ್ಣಯವಾದುದಕೆ

ಅಂದೆ ನಿರ್ಣಯವಾದುದಕೆ

( ರಾಗ ಸೌರಾಷ್ಟ್ರ ಆದಿ ತಾಳ) ಅಂದೆ ನಿರ್ಣಯವಾದುದಕೆ, ಸಿರಿ ಇಂದಿರಾಪತಿ ಪರ ದೇವತೆಯೆಂದು ||ಪ|| ಅಂದು ಸ್ವಯಂವರದಲ್ಲಿ ಬ್ರಹ್ಮರುದ್ರಾದಿ ಇಂದ್ರಾದಿಗಳೆಲ್ಲರ ಜರೆದು ಇಂದಿರೆ ನಿತ್ಯಾನಂದ ನಿರ್ದೋಷ ಗುಣ ಪೂರ್ಣ- ನೆಂದು ಮಾಲೆಯ ತಾ ಹಾಕಿದಳು || ಸರಸಿಜೋದ್ಭವ ಹರಿಪಾದವ ತೊಳೆಯಲು ಹರ ಭಕ್ತಿಯಿಂದ ಹರಿಪಾದ ತೀರ್ಥವ ಹರುಷದಿ ಸುರಮುನಿಗಳೆಲ್ಲರ ಮುಂದೆ ಧರಿಸಿದನೆಂದು ಶಿರಸಿನಲ್ಲಿ || ವೃಕನೆಂಬಾಸುರಗೆ ಹರ ವರವನೆ ಕೊಟ್ಟು ಚಕಿತನಾಗಿ ಓಡಿ ಬಳಲುತ್ತಿರೆ ರುಕುಮಿಣಿಪತಿ ವೃಕಾಸುರನ ಭಸ್ಮವ ಮಾಡಿ ಭಕುತ ರುದ್ರನೆಂದು ಪಾಲಿಸಿದ || ಕರಿಯಾದಿಮೂಲಗೆ ಮೊರೆಯಿಡಲದ ಕೇಳಿ ಸುರರು ತಾವೊಲ್ಲೆವೆಂದು ಸುಮ್ಮನಿರಲು ಗರುಡನ ಪೆಗಲೇರಿ ಹರಿ ಬೇಗದಿ ಬಂದು ಕರಿರಾಜನನಂದು ತಾ ರಕ್ಷಿಸಿದ || ಹರಿಹರವಿರಿಂಚರ ಲೋಕಗಳಿಗೆ ಪೋಗಿ ಹರಿಹರವಿರಿಂಚರ ಪರಿಗಳನು ಹರುಷದಿ ಭೃಗುಮುನಿ ತಿಳಿದು ಬೇಗದಿ ಬಂದು ಸರಸ್ವತೀ ತೀರದ ಋಷಿಗಳಿಗೊರೆದ || ನಾಮತ್ರಯ ಪ್ರಭಾವದಿಂದಲಿ ಬೇಗ ಸೋಮಧರನು ವಿಷವನೆ ಧರಿಸಿ ರಾಮ ನಾಮವೆಂಬ ಅಮೃತಪಾನದಿಂ ಕಾಮಾರಿ ತಾ ಮೃತ್ಯುಂಜಯನಾದ || ಸಂದೇಹಾತ್ಮಾ ವಿನಶ್ಯತಿಯೆಂಬ ಶ್ರುತಿ ವೃಂದಗಳೆಲ್ಲವು ಸಾರುತಿರೆ ಪು- ರಂದರ ವಿಠಲ ಸರ್ವೋತ್ತಮನೆಂಬಲ್ಲಿ ಸಂದೇಹವ ಬಿಟ್ಟು ಸುಖಿಸೆಲೋ ಜೀವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು