ಅಂದಿಂದ ನಾ ನಿನ್ನ ನೆರೆ ನಂಬಿದೆನೊ

ಅಂದಿಂದ ನಾ ನಿನ್ನ ನೆರೆ ನಂಬಿದೆನೊ

( ರಾಗ ಕಲ್ಯಾಣಿ ತ್ರಿಪುಟ ತಾಳ) ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||ಪ|| ತಂದೆ ಗೋವಿಂದ ಮುಕುಂದ ನಂದನ ಕಂದ ||ಅ|| ಬಲವಂತನುತ್ತಾನಪಾದರಾಯನ ಕಂದ ಮಲತಾಯಿ ನೂಕಲು ಅಡವಿಯೊಳು ಜಲಜಾಕ್ಷ ನಿನ್ನ ಕುರಿತ ತಪವಿರಲಾಗಿ ಒಲಿದು ಧ್ರುವಗೆ ಪಟ್ಟ ಗಟ್ಟಿದ್ದು ಕೇಳಿ ನಕ್ರಂಗೆ ಗಜರಾಜ ಸಿಕ್ಕಿ ಸರಸಿಯೊಳು ದುಃಖದಿ ಶ್ರೀಹರಿ ಸಲಹೆನ್ನಲು ಚಕ್ರದಿ ನೆಗಳ ಕಂಠವ ತರಿದು ಭಕ್ತನ ವಕ್ರವ ಪರಿದಾದಿಮೂಲನೆಂಬುದ ಕೇಳಿ ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು ಕಪಟದಿ ಸೀರೆಯ ಸೆಳೆಯುತಿರೆ ಸುಪರ್ಣ ವಾಹನ ಕೃಷ್ಣ ಸಲಹೆಂದರಬಲೆಯ ಅಪಮಾನದಿಂ ಕಾಯ್ದ ಶ್ರೀಹರಿಯೆಂಬುದ ಕೇಳಿ ಹರಿ ನಾರಾಯಣಯೆಂದು ಪ್ರಹ್ಲಾದ ಒರೆಯಲು ದುರುಳ ದಾನವನವನೊಳು ಮುನಿದು ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ- ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ ಅಂಬರೀಷಗೆ ದುರ್ವಾಸ ಶಾಪವ ಕೊಡೆ ಅಂಬುಜಲೋಚನ ಚಕ್ರದಿಂದ ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ ಕಂಬು ಚಕ್ರಧರ ಹರಿಯೆಂಬುದ ಕೇಳಿ ಛಲ ಬೇಡ ರಾಮನ ಲಲನೆಯ ಬಿಡುಯೆಂದು ತಲೆಹತ್ತರವಗೆ ಪೇಳಲು ತಮ್ಮನ ಬಳಲಿಸಿ ಹೊರಡಿಸಲವ ನಿನ್ನ ಮೊರೆ ಹೋಗೆ ಸಲೆ ವಿಭೀಷಣಗೆ ಲಂಕೆಯನಿತ್ತುದ ಕೇಳಿ ಸುರ ನರ ನಾಗಲೋಕದ ಭಕ್ತ ಜನರನ್ನು ಪೊರೆಯಲೋಸುಗ ವೈಕುಂಠದಿಂದ ಸಿರಿ ಸಹಿತಲೆ ಬಂದು ಶೇಷಾಚಲದಿ ನಿಂದ ಪುರಂದರವಿಠಲ ನಿನ್ನಯ ಚರಣವ ಕಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು